ಬೆಂಗಳೂರು: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಪ್ರವಾಸಿಗರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ.
ಶಿವಮೊಗ್ಗ ನಿವಾಸಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಆದರೆ ಅವರೊಂದಿಗೆ ಇದ್ದ ಅವರ ಕುಟುಂಬಗಳು ಸುರಕ್ಷಿತವಾಗಿವೆ, ಸ್ಟಾವೇರ್ ಉದ್ಯೋಗಿಯಾಗಿದ್ದ 41 ವರ್ಷದ ಭರತ್ ಭೂಷಣ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ, ಆದರೆ ಆ ಸಮಯದಲ್ಲಿ ಅವರೊಂದಿಗೆ ಇದ್ದ ಅವರ ಪತ್ನಿ ಸುಜಾತಾ ಮತ್ತು ಅವರ ಮೂರು ವರ್ಷದ ಮಗ ದಾಳಿಯಿಂದ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.
47 ವರ್ಷದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಅವರು ಕೂಡಾ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಪಲ್ಲವಿ ಮತ್ತು ಅವರ 18 ವರ್ಷದ ಮಗ ಸುರಕ್ಷಿತವಾಗಿದ್ದಾರೆ.
ಪಹಲ್ಗಾಮ್ನಿಂದ ದೂರವಾಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ, ಭಯೋತ್ಪಾದಕರು ತನ್ನ ಪತಿಯ ಮೇಲೆ ಗುಂಡು ಹಾರಿಸಿದಾಗ, ತಾನು ಮತ್ತು ತನ್ನ ಮಗ ಅಲ್ಲೇ ಇದ್ದೆವು ಎಂದು ಹೇಳಿದ್ದಾರೆ.
ದಾಳಿಯಿಂದ ನಮ್ಮನ್ನು ರಕ್ಷಿಸುವಲ್ಲಿ ನಮ್ಮ ಚಾಲಕ ಹಾಗೂ ಸ್ಥಳೀಯ ಮೂವರು ಮುಸ್ಲಿಮರು ಸಹಾಯ ಮಾಡಿದ್ದಾರೆ. ಘಟನೆ ನಡೆದಾಗಿನಿಂದ ಚಾಲಕ ನಮ್ಮೊಂದಿಗಿದ್ದಾನೆ. ಮೂವರು ಸ್ಥಳೀಯ ಮುಸ್ಲಿಮರು ’ಬಿಸ್ಮಿಲ್ಲಾ’ ಎಂದು ಹೇಳುತ್ತಾ ದಾಳಿ ನಡೆದ ಸ್ಥಳದಿಂದ ಕೆಳಗೆ ಬರಲು ನಮಗೆ ಸಹಾಯ ಮಾಡಿದರು. ಅವರು ನನ್ನ ಸಹೋದರರಂತೆ ಇದ್ದರು. ಅವರಲ್ಲಿ ಒಬ್ಬರು ನನ್ನ ಮಗನನ್ನು ಎತ್ತಿಕೊಂಡು ಬಂದರು. ಇನ್ನಿಬ್ಬರು ಕಠಿಣ ಭೂಪ್ರದೇಶವನ್ನು ದಾಟಲು ನನಗೆ ಸಹಾಯ ಮಾಡಿದರು ಎಂದು ಅವರು ಹೇಳಿದ್ದಾರೆ.
ಉಗ್ರರ ದಾಳಿಯಲ್ಲಿ ರಾಜ್ಯದ ಇಬ್ಬರು ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು