ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಸಮೀಪದ ಬೆಟ್ಟಗುಡ್ಡಗಳಲ್ಲಿ ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಬುಧವಾರ ಗಲಾಟೆ ನಡೆದಿದೆ.
ಗಣಿ ಮಾಲೀಕ ಸಕಲೇಶ್ ಎಂಬಾತ ಸ್ಥಳೀಯ ರೈತ ರವಿ ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ.
ಗಣಿಗಾರಿಕೆ ಲಾರಿಗಳ ಓಡಾಟ ಮತ್ತು ರಸ್ತೆ ನಿರ್ಮಾಣ ವಿರೋಧಿಸಿ ಫೆಬ್ರುವರಿಯಲ್ಲಿ ಮಂಚೇನಹಳ್ಳಿಯಲ್ಲಿ ರೈತ ಸಂಘ, ಮಂಚೇನಹಳ್ಳಿ ತಾಲ್ಲೂಕು ಪರಿಸರ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.
ಬೆಟ್ಟದ ತಪ್ಪಲಿನಲ್ಲಿ ಮುನೇಶ್ವರ ಗುಡಿ, ತಿಮ್ಮರಾಯನಗುಡಿ ಇದೆ. ಸ್ವಚ್ಛಗಾಳಿ, ನೀರು, ಮೇವು ನೀಡುತ್ತಿರುವ ನಮ್ಮ ಊರಿನ ಬೆಟ್ಟ ಗುಡ್ಡಗಳಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ದಾರಿ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಸಘಗಳು ಸಹ ನಡೆದಿದ್ದವು.
ಬುಧವಾರ ಸಕಲೇಶ್ ಮತ್ತು ಆತನ ಕಡೆಯವರು ಜೆಸಿಬಿಗಳ ಮೂಲಕ ರಸ್ತೆ ನಿರ್ಮಿಸಲು ಮುಂದಾಗಿದ್ದರು. ಆಗ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ, ಆಗ ಸಕಲೇಶ್, ರಿವಾಲ್ವರ್ ಹಿಡಿದು ಯಾರು ಬರುತ್ತಿರೊ ಬರ್ರೋ ಎನ್ನುತ್ತ ರವಿ ಮೇಲೆ ಗುಂಡು ಹಾರಿಸಿದ್ದಾನೆ. ರವಿ ತೊಡೆಗೆ ಗುಂಡು ತಗುಲಿದೆ.
ಗಾಯಾಳುವನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಚೇನಹಳ್ಳಿ ಮತ್ತು ಗೌರಿಬಿದನೂರು ಪೊಲೀಸರು ಭೇಟಿ ನೀಡಿದ್ದು ಬಿಗುವಿನ ವಾತಾವರಣವಿದೆ.
ರೈತನ ಮೇಲೆ ಗುಂಡು ಹಾರಿಸಿದ ಗಣಿ ಮಾಲೀಕ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು