ಬೆಂಗಳೂರು: ನಗರದ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು 1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಠಾಣೆಯ ಪಿಎಸ್ ಐ ಮತ್ತು ಪಿಐ ಅನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಆವಲಹಳ್ಳಿ ನಿವಾಸಿ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ಅವರ ಹೆಸರನ್ನು ಕೈಬಿಡಲು ಪಿಐ ಶಿವಾಜಿ ರಾವ್ ಮತ್ತು ಪಿಎಸ್ ಐ ಶಿವಾನಂದ ಜಿ. ಅವರು 6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೇಶವಮೂರ್ತಿ ಅವರು ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಡಿವೈಎಸ್ ಪಿ ಗಿರೀಶ್ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ರೂಪಿಸಲಾಗಿತ್ತು. ಲೋಕಾಯುಕ್ತ ಪೊಲೀಸರ ಸೂಚನೆಯಂತೆ ಕೇಶವಮೂರ್ತಿ ಅವರು ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಬಳಿಯಲ್ಲೇ ಪಿಐ ಮತ್ತು ಪಿಎಸ್ಐಗೆ 1 ಲಕ್ಷ ನೀಡಿದ್ದರು.
ಈ ವೇಳೆಯೇ ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದರು. 1 ಲಕ್ಷ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.