ಮಂಡ್ಯ: ಸಂಚಾರ ಪೊಲೀಸರ ಎಡವಟ್ಟಿನಿಂದ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ನಗರದ ಸ್ವರ್ಣಸಂದ್ರ ಬಳಿ ಸೋಮವಾರ ನಡೆದಿದೆ. ತಪಾಸಣೆ ವೇಳೆ ಬೈಕ್ ಅಡ್ಡಗಟ್ಟಿದಾಗ ಕೆಳಗೆ ಬಿದ್ದ ಮಗು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹೇಶ್ ಪುತ್ರಿ ರಿತಿಕ್ಷಾ (3) ಮೃತಪಟ್ಟ ಮಗು.
ಘಟನೆ ವಿವರ: ಮಹೇಶ್ ಅವರು ತನ್ನ ಪತ್ನಿ ಹಾಗೂ ತನ್ನ ಮೂರು ವರ್ಷದ ಮಗಳನ್ನು ಮಿಮ್ಸ್ ಆಸ್ಪತ್ರೆಗೆ ನಾಯಿ ಕಡಿತದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಕರೆತರುತ್ತಿದ್ದರು. ಈ ವೇಳೆ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸದಿರುವ ಬೈಕ್ ಸವಾರರ ತಡೆದು ತಪಾಸಣೆ ನಡೆಸುತ್ತಿದ್ದರು.ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಆತಂಕಗೊಂಡಿದ್ದಾರೆ. ಈ ವೇಳೆ ಮಗು ಬೈಕ್ ನಿಂದ ಬಿದ್ದು ಸಾವನ್ನಪ್ಪಿದೆ.ಪೊಲೀಸರ ಎಡವಟ್ಟಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಸಾರ್ವಜನಿಕರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಹೆದ್ದಾರಿಯಲ್ಲಿಯೇ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪೋಷಕರ ಕ್ಷಮೆಯಾಚಿಸಿದರು. ಮೂವರು ಸಂಚಾರಿ ಪೊಲೀಸರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸ್ಥಳಕ್ಕೆ ಶಾಸಕ ರವಿಕುಮಾರ್ ಗೌಡ ಗಣಿಗ ಭೇಟಿ ನೀಡಿ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ: ಹೆಚ್ ಡಿಕೆ
ಮಂಡ್ಯದಲ್ಲಿ ಸಂಭವಿಸಿ ಮೃತಪಟ್ಟ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಪ್ರಕರಣ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮಂಡ್ಯದಲ್ಲಿ ಸಂಭವಿಸಿರುವ ಮುಗ್ಧ ಬಾಲಕಿಯ ದುರ್ಮರಣ ನನಗೆ ತೀವ್ರ ದುಃಖವುಂಟು ಮಾಡಿದೆ. ನಾಯಿ ಕಡಿತದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತನ್ನ ತಂದೆ-ತಾಯಿ ಜತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ಹಸುಕಂದ ಹೀಗೆ ಅಕಾಲ ಮರಣಕ್ಕೆ ತುತ್ತಾಗಿರುವುದು ನನ್ನ ಮನಸ್ಸನ್ನು ಕಲಕಿದೆ.
ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು. ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ಏಕಾಏಕಿ ರಸ್ತೆಯಲ್ಲಿ ತಡೆದು ನಿಲ್ಲಿಸುವ ಅಥವಾ ಅವರಿಗೆ ಗಾಬರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಸ್ವಲ್ಪ ಎಚ್ಚರ ವಹಿಸಿದ್ದಿದ್ದರೆ ಮಗುವಿನ ಸಾವನ್ನು ತಪ್ಪಿಸಬಹುದಿತ್ತು. ಭವಿಷ್ಯದಲ್ಲಿ ಇಂಥ ಅಚಾತುರ್ಯದ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು.