
ಫೆ.14 ರಂದು ನಂದಿಬೆಟ್ಟ ಬಂದ್
ಚಿಕ್ಕಬಳ್ಳಾಪುರ: ವಿಶ್ವ ಪ್ರೇಮಿಗಳ ದಿನಾಚರಣೆಗೆ ನಂದಿಬೆಟ್ಟಕ್ಕೆ (ನಂದಿಹಿಲ್ಸ್) ಹೋಗಬೇಕು ಎಂದುಕೊಂಡವರಿಗೆ ಬೇಸರದ ಸಂಗತಿ. ಫೆ.14 ರಂದು ನಂದಿಬೆಟ್ಟಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಉಪ ಆಯುಕ್ತ ಜಿ ಪ್ರಭು, ಜನಪ್ರಿಯ ಪ್ರವಾಸಿ ತಾಣದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿದರು. ಹಿಂದೆ ಪ್ರೇಮಿಗಳ ದಿನದಂದು ವರದಿಯಾದ ಆತ್ಮಹತ್ಯೆ ಪ್ರಕರಣ ಪರಿಗಣಿಸಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರ ವರದಿಯ ನಂತರ, ನಾವು ಈ ನಿಷೇಧವನ್ನು ವಿಧಿಸಲು ನಿರ್ಧರಿಸಿದ್ದೇವೆ ಎಂದು ಪ್ರಭು ಹೇಳಿದರು.
ಹೊಸ ವರ್ಷದ ದಿನವನ್ನು ಹೊರತುಪಡಿಸಿ, ನಂದಿ ಬೆಟ್ಟವು ವರ್ಷವಿಡೀ ತೆರೆದಿದ್ದರೂ, ಪ್ರೇಮಿಗಳ ದಿನದಂದು ಅವ್ಯವಸ್ಥೆಯನ್ನು ತಪ್ಪಿಸಲು ಪ್ರವೇಶ ನಿಷೇಧ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ವಾರಾಂತ್ಯಗಳಲ್ಲಿ, 16,000 ರಿಂದ 18,000 ಪ್ರವಾಸಿಗರು ಆಗಮಿಸುವುದನ್ನು ನಾವು ನೋಡುತ್ತೇವೆ, ಅದರಲ್ಲಿ 3,000 ರಿಂದ 3,500 ದ್ವಿಚಕ್ರ ವಾಹನಗಳು ಮತ್ತು 1,500 ರಿಂದ 1,700 ನಾಲ್ಕು ಚಕ್ರ ವಾಹನಗಳು ಬರುತ್ತವೆ. ಒಂದೇ ಒಂದು ಸಂಪರ್ಕ ರಸ್ತೆ ಇರುವುದರಿಂದ, ವಾರಾಂತ್ಯಗಳಲ್ಲಿ ಹೆಚ್ಚುವರಿ ಪೊಲೀಸರನ್ನು ಈಗಾಗಲೇ ನಿಯೋಜಿಸಲಾಗಿದೆ. ಸಾಮಾನ್ಯ ದಿನಗಳಲ್ಲಿಯೂ ಸಹ, 5,000 ರಿಂದ 6,000 ಪ್ರವಾಸಿಗರ ಓಡಾಟ ಇರುತ್ತದೆ, 500 ರಿಂದ 700 ನಾಲ್ಕು ಚಕ್ರ ವಾಹನಗಳು ಮತ್ತು 1,000 ರಿಂದ 1,500 ದ್ವಿಚಕ್ರ ವಾಹನಗಳು ಇರುತ್ತವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.

ಈ ವರ್ಷ, ಪ್ರೇಮಿಗಳ ದಿನವು ತಿಂಗಳ ಎರಡನೇ ಶನಿವಾರ ಬಂದಿದೆ. ಹೀಗಾಗಿನ ಪ್ರೇಮಿಗಳು ಮತ್ತು ಸಂದರ್ಶಕರ ಸಂಖ್ಯೆ 15,000 ರಿಂದ 20,000 ಕ್ಕೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ನಿರೀಕ್ಷಿಸುತ್ತಾರೆ, ಇದರ ಜೊತೆಗೆ 5,000 ರಿಂದ 6,000 ನಾಲ್ಕು ಚಕ್ರ ವಾಹನಗಳು ಬರುತ್ತವೆ. ಇದು ಸಂಪೂರ್ಣ ಅವ್ಯವಸ್ಥೆಗೆ ಕಾರಣವಾಗುತ್ತದೆ. ಈ ಹಿಂದೆ ನಡೆದ ಆತ್ಮಹತ್ಯೆಯ ಘಟನೆಯಿಂದಾಗಿ ಆಡಳಿತ ಮತ್ತು ಪೊಲೀಸರಿಗೆ ಮೃತದೇಹಗಳನ್ನು ಹಿಂಪಡೆಯುವುದು ತುಂಬಾ ಕಷ್ಟಕರವಾಗಿತ್ತು, ಬೆಟ್ಟದ ಗೌರವವನ್ನು ರಕ್ಷಿಸಲು ನಿಷೇಧಾಜ್ಞೆಗಳನ್ನು ಜಾರಿಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಪ್ರಭು ಹೇಳಿದರು.
ಜನದಟ್ಟಣೆಯ ಅಪಾಯದ ಹೊರತಾಗಿ, ವಾತಾವರಣವು ಹೆಚ್ಚಾಗಿ ಕಸ ಮತ್ತು ಗದ್ದಲದಿಂದ ಹಾಳಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ. ಜನರು ಪ್ಲಾಸ್ಟಿಕ್ ಎಸೆಯುವ ಮೂಲಕ ಪರಿಸರವನ್ನು ಕಲುಷಿತಗೊಳಿಸುತ್ತಾರೆ. ಮದ್ಯದ ಪ್ರಭಾವದಿಂದ ತೊಂದರೆ ಉಂಟುಮಾಡುತ್ತಾರೆ. ಪ್ರೇಮಿಗಳ ದಿನ ಶನಿವಾರವಾಗುವುದರಿಂದ, ಸಾವಿರಾರು ಜನರು, ವಿಶೇಷವಾಗಿ ದಂಪತಿಗಳು ಇಲ್ಲಿಗೆ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ನಿಷೇಧ ಜಾರಿಗೊಳಿಸುವುದು ಅನಿವಾರ್ಯವಾಗಿತ್ತು ಎಂದಿದ್ದಾರೆ.


