
ಗುಬ್ಬಿ: ತಾಲೂಕಿನ ಬಹುತೇಕ ಭಾಗಗಳಲ್ಲಿ ಸೋಮವಾರ ರಾತ್ರಿ ಭರ್ಜರಿಯಾಗಿ ಮಳೆ ಸುರಿಯುವ ಮೂಲಕ ಸಾಕಷ್ಟು ಅನಾಹುತ ಸೃಷ್ಟಿ ಮಾಡಿದೆ.
ತಾಲೂಕಿನ ಮುನಿಯಪ್ಪನ ಪಾಳ್ಯ ಗ್ರಾಮದ ಸಿದ್ದಮ್ಮ ಎನ್ನುವವರ ಮನೆ ಸಂಪೂರ್ಣವಾಗಿ ಗೋಡೆ ಕುಸಿದು 9 ಜನರು ಅದೃಷ್ಟವಶಾತ್ ಪಾರಾಗಿದ್ದಾರೆ, ಅದೇ ಮನೆಯಲ್ಲಿ ಮಲಗಿದ್ದ 9 ಜನರು ಹೆಚ್ಚು ಮಳೆ ಬೀಳುತ್ತಿದ್ದುದನ್ನು ಕಂಡು ಹೊರ ಭಾಗಕ್ಕೆ ಬಂದ ಕೊಡಲೇ ಮನೆಯ ಗೋಡೆ ಕುಸಿತ ಕಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಸರಕಾರ ನಮಗೆ ಪರಿಹಾರ ನೀಡಬೇಕು ಮತ್ತು ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಇನ್ನೂ ರಾಷ್ಟ್ರೀಯ ಹೆದ್ದಾರಿ ಸರಿಯಾದ ರೀತಿಯಲ್ಲಿ ವೈಜ್ಞಾನಿಕ ಕಾಮಗಾರಿ ಆಗದೆ ಇರುವುದರಿಂದ ರಸ್ತೆ ಪಕ್ಕದಲ್ಲಿ ನೀರು ನಿಲ್ಲುತ್ತಿದ್ದು, ನಿಟ್ಟೂರು ರಸ್ತೆಯ ಅಕ್ಕಪಕ್ಕದ ಮನೆ, ಶಾಲೆಗಳ ಭಾಗದಲ್ಲಿ ನೀರು ನಿಲ್ಲುವ ಮೂಲಕ ಸಾಕಷ್ಟು ಸಮಸ್ಯೆ ಎದುರಾಗಿದೆ.
ಬಿದರೆ ಗ್ರಾಮದಲ್ಲಿ ಮರ ಕೆಳಕ್ಕೆ ಉರಳಿದೆ, ಹಲವು ತೋಟಗಳಲ್ಲಿ ಅಡಿಕೆ, ತೆಂಗು, ಬಾಳೆ ಸಹ ಮುರಿದು ಬಿದ್ದಿದ್ದು ಸಾಕಷ್ಟು ನಷ್ಟವಾಗಿದೆ.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಹಲವು ಭಾಗದಲ್ಲಿ ಹೆಚ್ಚು ಮಳೆ ಬಿದ್ದ ಕಾರಣ ಅಂಗಡಿ ಮುಗ್ಗಟ್ಟು ಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ.
ಮಳೆ ಅವಾಂತರ, ಮನೆ ಗೋಡೆ ಕುಸಿತ, 9 ಮಂದಿ ಪಾರು







