ಬೆಂಗಳೂರು: ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಇತರ 16 ಮಂದಿ ಅಪರಾಧಿಗಳು ಎಂದು ಘೋಷಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆ ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ನ್ಯಾಯಾಲಯ ಬುಧವಾರ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಯ ವಾದಗಳನ್ನು ಆಲಿಸಿತು. ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಯೋಗೇಶ್ ಗೌಡರ್ ಹತ್ಯೆಗೆ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದರು.
ಆರೋಪಿಗಳನ್ನು ಕಾನೂನುಬಾಹಿರ ಸಭೆ, ಗಲಭೆ ಮತ್ತು ಕೊಲೆಗೆ ಸಂಬಂಧಿಸಿದ ವಿವಿಧ ಸೆಕ್ಷನ್ ಗಳ ಅಡಿಯಲ್ಲಿಯೂ ದೋಷಿಗಳೆಂದು ಘೋಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದರಲ್ಲಿ ಐಪಿಸಿ ಸೆಕ್ಷನ್ 302 ಜೊತೆಗೆ ಸೆಕ್ಷನ್ 120(ಬಿ) ಸೇರಿದೆ. ಅಪರಾಧಿಗಳಲ್ಲಿ ಹಲವರನ್ನು ಹೆಚ್ಚುವರಿಯಾಗಿ ಸಾಕ್ಷ್ಯಗಳ ನಾಶಕ್ಕೆ ಕಾರಣರಾದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಯಿತು. ಇನ್ನು 20ನೇ ಆರೋಪಿಯಾಗಿದ್ದ ವಾಸುದೇವ ರಾಮ ನಿಲೇಕಣಿ (ಧಾರವಾಡ ಉಪನಗರ ವಿಭಾಗದ ಎಸಿಪಿ) ಹಾಗೂ 21ನೇ ಆರೋಪಿಯಾಗಿದ್ದ ಸೋಮಶೇಖರ ಬಸಪ್ಪ ನ್ಯಾಮಗೌಡ (ವಿನಯ್ ಕುಲಕರ್ಣಿ ಆಪ್ತ ಸಹಾಯಕ) ಅವರನ್ನು ನಿರ್ದೋಷಿಗಳೆಂದು ಕೋರ್ಟ್ ತಿಳಿಸಿದೆ.
ಧಾರವಾಡದ ಜಿಮ್ನಾಷಿಯಂನಲ್ಲಿ 2016ರ ಜೂನ್ ನಲ್ಲಿ ಬಿಜೆಪಿ ನಾಯಕ ಯೋಗೇಶ್ ಗೌಡರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ಶಾಸಕ ವಿನಯ್ ಸೇರಿ 17 ಮಂದಿಗೆ ಇಂದು ಶಿಕ್ಷೆ ಪ್ರಕಟ







