ತಿಪಟೂರು: ತೆಂಗಿನಕಾಯಿ ಮಟ್ಟೆ ತುಂಬಿದ್ದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗುತ್ತಿದ್ದ ವೇಳೆ ತನ್ನ ಜೀವ ಹಾಗೂ ವಾಹನ ರಕ್ಷಿಸಲು ಚಾಲಕ ಲಾರಿಯನ್ನು ಕೆರೆಗೆ ಇಳಿಸಿದರೂ ಬಳಿಕ ನೀರಿನಿಂದ ಹೊರಬಂದ ತಕ್ಷಣ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಗುಂಗರಮಳೆ ಕೆರೆಯಲ್ಲಿ ನಡೆದಿದೆ.
ತಿಪಟೂರು ನಗರದ ಗಾಂಧೀನಗರ ನಿವಾಸಿ 46 ವರ್ಷದ ಚಾಂದ್ ಪಾಷ ಮೃತ ದುರ್ದೈವಿ ಚಾಲಕರಾಗಿದ್ದಾರೆ.
ಚಾಂದ್ ಪಾಷ ಅವರು ಕ್ಯಾಂಟರ್ ಲಾರಿಯಲ್ಲಿ ತೆಂಗಿನಕಾಯಿ ಮಟ್ಟೆ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ರಸ್ತೆ ಬದಿಯ ವಿದ್ಯುತ್ ತಂತಿಗೆ ವಾಹನ ತಾಗಿದ ಪರಿಣಾಮ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಚಾಲಕ ತನ್ನ ಜೀವ ಹಾಗೂ ವಾಹನ ರಕ್ಷಿಸುವ ಉದ್ದೇಶದಿಂದ ಸಮೀಪದಲ್ಲಿದ್ದ ಗುಂಗರ ಮಳೆ ಕೆರೆಗೆ ಲಾರಿ ಇಳಿಸಿದ್ದಾರೆ.
ಕೆರೆಯ ನೀರಿಗೆ ಇಳಿದ ತಕ್ಷಣ ಲಾರಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿದೆ, ಬಳಿಕ ಚಾಲಕ ಚಾಂದ್ ಪಾಷ ಸಾರ್ವಜನಿಕರ ಸಹಾಯದಿಂದ ಈಜಿ ದಡ ಸೇರಿದ್ದಾರೆ, ಆದರೆ ನೀರಿನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಅವರು ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ, ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.
ಅಗ್ನಿ ಅವಘಡದಿಂದ ಪಾರಾದರೂ ಹೃದಯಾಘಾತದಿಂದ ಜೀವ ಕಳೆದುಕೊಂಡ ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ವಿಷಾದ ಮೂಡಿಸಿದೆ.
ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





