
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಗೆ ಮೊದಲ ದಿನವೇ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದೆ. ಟಿವಿಕೆ ಶಾಸಕರೊಬ್ಬರಿಗೆ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ತಡೆ ನೀಡಿದೆ.
ಮದ್ರಾಸ್ ಹೈಕೋರ್ಟ್ ಮಂಗಳವಾರ ತಿರುಪತ್ತೂರು ಶಾಸಕ ಆರ್.ಶ್ರೀನಿವಾಸ ಸೇತುಪತಿ ಅವರನ್ನು ವಿಧಾನಸಭೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಹೀಗಾಗಿ ವಿಜಯ್ ನೇತೃತ್ವದ ಸರ್ಕಾರ ಎದುರಿಸಲಿರುವ ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ.
ನ್ಯಾಯಮೂರ್ತಿಗಳಾದ ಎಲ್.ವಿಕ್ಟೋರಿಯಾ ಗೌರಿ ಮತ್ತು ಎನ್.ಸೆಂಥಿಲ್ ಕುಮಾರ್ ಒಳಗೊಂಡ ವಿಭಾಗೀಯ ಪೀಠವು ಮಧ್ಯಂತರ ತಡೆ ಆದೇಶವನ್ನು ನೀಡಿದೆ. ಅರ್ಜಿಯನ್ನು ಮಾಜಿ ಸಚಿವ ಪೆರಿಯಕರುಪ್ಪನ್ ಸಲ್ಲಿಸಿದ್ದರು. ತಿರುಪತ್ತೂರು ವಿಧಾನಸಭಾ ಚುನಾವಣೆಯಲ್ಲಿ ಆರ್.ಶ್ರೀನಿವಾಸ ವಿರುದ್ಧ ಕೇವಲ ಒಂದು ಮತದ ಅಂತರದಿAದ ಅವರು ಸೋತಿದ್ದರು.
ಶಿವಗಂಗೈ ಜಿಲ್ಲೆಯ ತಿರುಪತ್ತೂರು ಕ್ಷೇತ್ರಕ್ಕೆ ಸೇರಿದ ಅಂಚೆ ಮತಪತ್ರವನ್ನು ತಪ್ಪಾಗಿ ತಿರುಪತ್ತೂರು ಜಿಲ್ಲೆಯ ಮತ್ತೊಂದು ತಿರುಪತ್ತೂರು ಕ್ಷೇತ್ರಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಿದರು. ಆ ಮತಪತ್ರವನ್ನು ಸರಿಯಾದ ಕ್ಷೇತ್ರಕ್ಕೆ ಮರುಕಳುಹಿಸಿ ಎಣಿಸುವ ಬದಲು ತಿರಸ್ಕರಿಸಲಾಗಿದೆ ಎಂದು ಅವರು ಅರ್ಜಿ ಸಲ್ಲಿಸಿದ್ದರು. ಈ ತೀರ್ಪು ವಿಜಯ್ ನೇತೃತ್ವದ ಸರ್ಕಾರದ ಸ್ಥಿರತೆಯನ್ನು ನಿರ್ಧರಿಸಬಹುದಾದ ವಿಶ್ವಾಸ ಪರೀಕ್ಷೆಗೆ ಮುನ್ನವೇ ತಮಿಳುನಾಡಿನ ರಾಜಕೀಯ ವಾತಾವರಣವನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.
ಸಿಎಂ ವಿಜಯ್ ಗೆ ಹೈಕೋರ್ಟ್ ಶಾಕ್ ಒಂದು ಮತದಿಂದ ಗೆಲುವು: ವಿಶ್ವಾಸಮತದಲ್ಲಿ ಪಾಲ್ಗೊಳ್ಳದಂತೆ ತಡೆ









