
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣಕ್ಕೆ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ದೇವಾಲಯ, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಇರುವ 717 ಸರ್ಕಾರಿ ಮದ್ಯದಂಗಡಿಗಳನ್ನು ಎರಡು ವಾರದೊಳಗೆ ಮುಚ್ಚಲು ಆದೇಶಿಸಿದ್ದಾರೆ.
ರಾಜ್ಯ ಸರ್ಕಾರದ ಅಧೀನದಲ್ಲಿ (ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೋರೇಷನ್) ಈ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಒಟ್ಟು 4,765 ಟಿಎಎಸ್ಎಮ್ಎಸಿ ಅಂಗಡಿಗಳಿವೆ. ಅವುಗಳಲ್ಲಿ 276 ದೇವಾಲಯಗಳ ಸಮೀಪ, 186 ಶಿಕ್ಷಣ ಸಂಸ್ಥೆಗಳ ಬಳಿ ಹಾಗೂ 255 ಬಸ್ ನಿಲ್ದಾಣಗಳ ಬಳಿ ಇವೆ.
ಮುಖ್ಯಮಂತ್ರಿ ಸ್ಥಾನಕ್ಕೇರಿದ ತಕ್ಷಣವೇ ವಿಜಯ್ ಈ ಮಹತ್ವದ ಆದೇಶ ಹೊರಡಿಸಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರ ಹಿತ ಹಾಗೂ ಯುವಜನರನ್ನು ವ್ಯಸನದಿಂದ ದೂರವಿಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ವ್ಯಸನ ಮುಕ್ತ ತಮಿಳುನಾಡು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಟಿಎಎಸ್ಎಮ್ಸಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಮುಂದುವರಿದಿದೆ. ಕಳೆದ ವರ್ಷ ಹಣ ವರ್ಗಾವಣೆ ಹಾಗೂ ಟೆಂಡರ್ ಅಕ್ರಮಗಳ ಆರೋಪದಡಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಟಿಎಎಸ್ಎಮ್ಸಿ ಮಳಿಗೆಗಳಲ್ಲಿ ಪ್ರತಿ ಬಾಟಲಿಗೆ ಹೆಚ್ಚುವರಿ ಹಣ ವಸೂಲಿ, ಟೆಂಡರ್ ಅಕ್ರಮ ಮತ್ತು ಸುಮಾರು 1,000 ಕೋಟಿ ರೂ. ಮೌಲ್ಯದ ಲೆಕ್ಕವಿಲ್ಲದ ಹಣದ ವ್ಯವಹಾರ ನಡೆದಿದೆ ಎಂದು ಇಡಿ ಆರೋಪಿಸಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ವರೆಗೂ ತಲುಪಿದೆ. ರಾಜ್ಯ ಸರ್ಕಾರದ ಅಧಿಕಾರಕ್ಕೆ ಕೇಂದ್ರ ತನಿಖಾ ಸಂಸ್ಥೆಗಳು ಹಸ್ತಕ್ಷೇಪ ಮಾಡುತ್ತಿರುವ ಕುರಿತು ನ್ಯಾಯಾಲಯ ಪ್ರಶ್ನೆ ಎತ್ತಿತ್ತು. ಆಗಿನ ಡಿಎಂಕೆ ಸರ್ಕಾರ ಇದನ್ನು ರಾಜಕೀಯ ಸೇಡು ಎಂದು ಟೀಕಿಸಿತ್ತು.
717 ಮದ್ಯದಂಗಡಿ ಬಂದ್ ತಮಿಳುನಾಡು ಮುಖ್ಯಮಂತ್ರಿ ವಿಜಯ್ ದಿಟ್ಟ ನಿರ್ಧಾರ









