ಚಿಕ್ಕಮಗಳೂರು: ಅಧಿಕಾರಿ ನೀಡುತ್ತಿದ್ದಂತ ಕಿರುಕುಳಕ್ಕೆ ಬೇಸತ್ತು, ತನಗೆ ಕಿರುಕುಳ ನೀಡುತ್ತಿದ್ದಂತ ಅಧಿಕಾರಿಯ ಎದುರೇ ಕೆಎಸ್ ಆರ್ ಟಿಸಿ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಕಡೂರು ಡಿಪೋದಲ್ಲಿ ನಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕೆಎಸ್ ಆರ್ ಟಿಸಿ ಡಿಪೋದಲ್ಲಿ ಚಾಲಕರಾಗಿ ಮಧು ಎಂಬುವರು ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಸಹಾಯಕ ಸಂಚಾರ ನಿರೀಕ್ಷಕ ಪುಟ್ಟಸ್ವಾಮಿ ಎಂಬುವರು ಕಿರುಕುಳ ನೀಡುತ್ತಿದ್ದರಂತೆ. ಈ ಕಾರಣಕ್ಕೆ ಬೇಸತ್ತ ಅವರು, ಇಂದು ಅವರ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಮುನ್ನ ಕೆಎಸ್ ಆರ್ ಟಿಸಿ ಚಾಲಕ ಮಧು ಎಟಿಎಸ್ ಪುಟ್ಟಸ್ವಾಮಿ ನೀಡುತ್ತಿದ್ದಂತ ಕಿರುಕುಳವನ್ನು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೇ ಎಟಿಎಸ್ ಅಧಿಕಾರಿ ಪುಟ್ಟಸ್ವಾಮಿ ನೀಡುತ್ತಿದ್ದಂತ ಕಿರುಕುಳದ ವೀಡಿಯೋ, ಆಡಿಯೋ ಕೂಡ ರೆಕಾರ್ಡ್ ಮಾಡಿದ್ದನ್ನು ತಿಳಿಸಿದ್ದಾರೆ.
ಕಡೂರು ಡಿಪೋದ ಕೆ ಎಸ್ ಆರ್ ಟಿ ಸಿ ಚಾಲಕ ಮಧು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಾರಣ, ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.