
ನವದೆಹಲಿ: ದೇಶದ ಗ್ರಾಮೀಣ ಜನರಿಗೆ ಮತ್ತೆ ಅಡುಗೆಗೆ ಸೀಮೆಎಣ್ಣೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ ಜನರಿಗೆ 45 ದಿನಕ್ಕೆ ಒಂದು ಸಿಲಿಂಡರ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ರಾಜ್ಯಗಳಿಗೆ ಕೇಂದ್ರ ಸರ್ಕಾರ 1 ಲಕ್ಷ ಕಿಲೋಲೀಟರ್ ನಿಯಮಿತ ಕೋಟಾದ ಜೊತೆಗೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಪ್ರಾಥಮಿಕವಾಗಿ ಪಡಿತರ ಅಂಗಡಿಗಳ ಮೂಲಕ ಸೀಮೆಎಣ್ಣೆಯನ್ನು ವಿತರಿಸಲಾಗುತ್ತದೆ.
ಹೋಟೆಲ್, ರೆಸ್ಟೋರೆಂಟ್ಗಳು ಪರ್ಯಾಯ ಇಂಧನವಾಗಿ ಬಯೋಮಾಸ್, ಆರ್ಡಿಎಫ್ ಪೆಲೆಟ್ಗಳು ಮತ್ತು ಕಲ್ಲಿದ್ದಲನ್ನು ಒಂದು ತಿಂಗಳ ಕಾಲ ಬಳಸಲು ಅನುಮತಿ ನೀಡುವಂತೆ ಪರಿಸರ ಸಂಸ್ಥೆಗಳನ್ನು ಕೇಳಿದೆ.
ಸೀಮೆಎಣ್ಣೆಯ ಬದಲು ಅಡುಗೆಗೆ ಎಲ್ಪಿಜಿ ಬಳಸುವ ಅಭಿಯಾನ 2012ರಲ್ಲಿ ಆರಂಭವಾಗಿತ್ತು. ಈಗ ಉಜ್ವಲ ಯೋಜನೆ ಅಡಿ ಬಡ ಕುಟುಂಬಕ್ಕೆ ಸರ್ಕಾರ ಸಬ್ಸಿಡಿ ದರದಲ್ಲಿ ಸಿಲಿಂಡರ್ ನೀಡುತ್ತಿದೆ.
ಎಲ್ಪಿಜಿ ಸಿಲಿಂಡರ್ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಬುಕ್ಕಿಂಗ್ ಅವಧಿಯನ್ನು ಏರಿಸಲಾಗಿದೆ. ಮೊದಲು 25 ದಿನಕ್ಕೆ ಒಂದು ಸಿಲಿಂಡರ್ ಸಿಗುತ್ತಿತ್ತು. ಇನ್ನು ಮುಂದೆ ಗ್ರಾಮೀಣ ಜನರಿಗೆ 45 ದಿನಗಳಿಗೊಮ್ಮೆ ಸಿಲಿಂಡರ್ ಸಿಗಲಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ) ಸುಜಾತಾ ಶರ್ಮಾ ಪ್ರತಿಕ್ರಿಯಿಸಿ, ದೇಶವು ಹಿಂದೆAದೂ ಈ ರೀತಿಯ ಪರಿಸ್ಥಿತಿಯನ್ನು ನೋಡಿರಲಿಲ್ಲ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ದೇಶೀಯ ಗ್ಯಾಸ್ ಸರಬರಾಜು ಮೇಲೆ ಪರಿಣಾಮ ಬೀರಿದೆ. ಗ್ರಾಮೀಣ ಗ್ರಾಹಕರು ಈಗ 45 ದಿನಗಳ ನಂತರ ಮಾತ್ರ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.


