
ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧ ಪರಿಣಾಮದಿಂದ ಅಡುಗೆ ಅನಿಲ ಬಳಕೆ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಗ್ಯಾಸ್ ಸಮಸ್ಯೆಯಿಂದ ಸಹಜವಾಗಿ ಹಾಲು ಹಾಗೂ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಮಾಡಬೇಕಾಗಬಹುದು ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ತೈಲ ಸರಬರಾಜಿನಲ್ಲಿ ಸಮಸ್ಯೆಯಿಲ್ಲ. ಆದರೆ ಅಡುಗೆ ಅನಿಲವನ್ನು ಶೇ.55ರಷ್ಟು ಮಾತ್ರ ಬಳಕೆ ಮಾಡಬೇಕು ಎಂಬ ನಿರ್ದೇಶನವಿದೆ. ಶೇಕಡಾ ನೂರರಷ್ಟು ಅಡುಗೆ ಅನಿಲ ಬಳಕೆ ಮಾಡಬೇಕಾದರೆ ಶೇ.35ರಷ್ಟು ಹೆಚ್ಚುವರಿ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಈ ರೀತಿ ಹೆಚ್ಚುವರಿ ಆರ್ಥಿಕ ಹೊರೆಯಾದಾಗ ಈ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸೂಚ್ಯವಾಗಿ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯ ನಿರ್ದೇಶನ ನೀಡಿದೆ. ಹೀಗಾಗಿ ಸಹಜವಾಗಿಯೇ ಹಾಲು ಒಕ್ಕೂಟಗಳು ತೊಂದರೆಗೆ ಸಿಲುಕುತ್ತಿವೆ. ಹಾಲು ಹಾಗೂ ನಂದಿನಿ ಉತ್ಪನ್ನಗಳಿಗೆ ಅಡುಗೆ ಅನಿಲ ಬಳಕೆಯ ಬಾಯ್ಲರ್ಗಳನ್ನು ಉಪಯೋಗಿಸುತ್ತಿದ್ದೇವೆ. ಎಲೆಕ್ಟ್ರಿಕ್ ಹಾಗೂ ಸೋಲಾರ್ ಶಕ್ತಿಯ ಬಾಯ್ಲರ್ಗಳನ್ನು ಬಳಸುತ್ತಿಲ್ಲ. ಒಂದು ವೇಳೆ ಪರ್ಯಾಯ ಬಾಯ್ಲರ್ಗಳನ್ನು ಉಪಯೋಗಿಸಬೇಕಾದರೆ ಬದಲಾವಣೆ ಮಾಡಿಕೊಳ್ಳಬೇಕು. ಅದಕ್ಕೆ ಟೆಂಡರ್ ಕರೆಯುವುದು ಸೇರಿದಂತೆ ಮತ್ತಿತರ ಕಾರಣಗಳಿಂದ ವಿಳಂಬವಾಗಲಿದೆ ಎಂದು ಅವರು ತಿಳಿಸಿದರು.
ಹಾಲಿನ ಬೆಲೆ ಹೆಚ್ಚಳ: ಡಿಕೆಸು ಮುನ್ಸೂಚನೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


