
ಬೆಂಗಳೂರು: ಸುಪ್ರೀಂಕೋರ್ಟ್ ಸೂಚನೆಯಂತೆ ಜೂ.20ರಿಂದ 24ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆಯನ್ನು ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಗ್ರೇಶಿ ಶುಕ್ರವಾರ ತಿಳಿಸಿದರು.
ಬೆಂಗಳೂರು ಪಂಚ ನಗರಪಾಲಿಕೆಗಳ ಚುನಾವಣೆ ಸಂಬಂಧ ಶುಕ್ರವಾರ ಆಯೋಗದಲ್ಲಿ ಕರೆಯಲಾಗಿದ್ದ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದರು. ಜೂನ್ 14ರಿಂದ 24ರ ಒಳಗೆ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಕಾನೂನು ಪ್ರಕಾರ ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆಗೆ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸಬೇಕಿತ್ತು. ಅದಕ್ಕಾಗಿ ಸಭೆ ನಡೆಸಲಾಗಿದೆ. ಚುನಾವಣಾ ಪ್ರಕ್ರಿಯೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ದಿನಾಂಕ ಘೋಷಣೆ ಮಾತ್ರ ಬಾಕಿಯಾಗಿದೆ ಎಂದು ತಿಳಿಸಿದರು.
ಜಿಬಿಎ ವತಿಯಿಂದ ಸ್ವಲ್ಪ ಕಾಲ ಚುನಾವಣೆ ಮುಂದೂಡುವಂತೆ ಮನವಿ ಮಾಡಲಾಗಿತ್ತು. ಆದರೆ, ಜೂನ್ 30ರೊಳಗೆ ಚುನಾವಣೆ ಪೂರ್ಣಗೊಳಿಸಬೇಕೆಂಬ ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ಇರುವುದರಿಂದ ಮುಂದೂಡುವ ಅಧಿಕಾರ ನನ್ನಗಿಲ್ಲ ಎಂದು ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದರು.
ಜೂ.24ರೊಳಗೆ ಸರ್ಕಾರಿ ಪ್ರಾಯೋಜಿತ ಯಾವುದೇ ಕಾರ್ಯಕ್ರಮಗಳಿದ್ದರೆ ಶೀಘ್ರವೇ ಮುಗಿಸಲು ಸೂಚನೆ ನೀಡಿದ್ದೇನೆ. ಚುನಾವಣೆ ದಿನಾಂಕ ಶೀಘ್ರದಲ್ಲೇ ಜಾರಿ ಆಗುವ ಬಗ್ಗೆ ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ತಿಳಿಸಿದರು.
ಜಿಬಿಎ ನೂರು ಸಮಸ್ಯೆ ಹೇಳಲಿ ಅದಕ್ಕೆ ನಾವು ಕೇರ್ ಮಾಡಲ್ಲ. ಒಂದು ವಾರ ಕಾಯುತ್ತೇನೆ. ಅವರು ಹೇಳಿದರೂ ಬಿಟ್ಟರೂ ನಾನು ಈ ಅವಧಿಯಲ್ಲಿ ಚುನಾವಣೆ ನಡೆಸುತ್ತೇನೆ. ಜೂನ್ 20 ರಿಂದ ಜೂನ್ 24 ರೊಳಗೆ ಚುನಾವಣೆ ನಡೆಸಬೇಕಾಗಿದೆ ಆದರೆ ಯಾವ ದಿನ ಚುನಾವಣೆ ಮಾಡಬೇಕು ಅನ್ನುವುದನ್ನು ಒಂದು ವಾರದಲ್ಲಿ ನಿಗದಿ ಪಡಿಸುತ್ತೇವೆ ಎಂದು ಹೇಳಿದರು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿ, ಚುನಾವಣೆಗೆ ಆರ್ಒ, ಎಆರ್ಒ ಹಾಗೂ ಬಿಎಲ್ಒ ಗಳ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯುಕ್ತರು ಸೂಚನೆ ನೀಡಿದ್ದಾರೆ ಅದನ್ನು ಪಾಲಿಸಲಾಗುವುದು ಎಂದು ತಿಳಿಸಿದರು.






