
ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಅಂತರದಿಂದ ಗೆಲುವು ಸಾಧಿಸಿದೆ. ಒಳಜಗಳದ ಪರಿಣಾಮ ಪಕ್ಷಕ್ಕೆ ಹಿನ್ನಡೆ ಆಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಅಹಿಂದ ಸೂತ್ರ ಯಶಸ್ಸು ತಂದುಕೊಟ್ಟಿತು. ಈ ಸೂತ್ರ ದಕ್ಷಿಣದಲ್ಲಿ ಯಶಸ್ಸು ಕಂಡಿಲ್ಲ. ಇದಕ್ಕೆ ಪಕ್ಷದ ಒಳಜಗಳವೇ ಕಾರಣ. ಇಲ್ಲವಾದರೆ 20,000ಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸುತ್ತಿತ್ತು ಎಂದು ತಿಳಿಸಿದರು.
ಜನರು ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಮತ ಹಾಕಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈಹಿಡಿದಿವೆ. ಕಾಂಗ್ರೆಸ್ ಪರ ಅಲೆ ಇದೆ ಎಂಬುದನ್ನು ಎರಡು ಕ್ಷೇತ್ರಗಳ ಗೆಲುವು ತೋರಿಸಿಕೊಟ್ಟಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಬಿಜೆಪಿಗೆ ಹೋಗಿವೆ ಹಾಗೂ ಬಿಜೆಪಿ ಮತ ಕಾಂಗ್ರೆಸ್ಗೆ ಬಂದಿವೆ ಎಂದರು.
ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡುವುದು ವಾಡಿಕೆ. ಬಹುಮತ ಸಾಬೀತುಪಡಿಸುವ ಹೊಣೆಗಾರಿಕೆ ಪಕ್ಷದ ಮೇಲಿರುತ್ತದೆ. ಈ ವಿಚಾರದಲ್ಲಿ ತಮಿಳುನಾಡು ರಾಜ್ಯಪಾಲರ ನಡೆ ಅಸಮಾಧಾನ ಮೂಡಿಸಿದೆ. ಟಿವಿಕೆಗೆ ಅನುಮತಿ ನಿರಾಕರಿಸುವ ಮೂಲಕ ಕೆಟ್ಟ ಸಂಪ್ರದಾಯವನ್ನು ಹಾಕಿಕೊಟ್ಟಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ದಾವಣಗೆರೆ: ಒಳಜಗಳದಿಂದ ಹಿನ್ನಡೆ ಕಾಂಗ್ರೆಸ್ 20 ಸಾವಿರ ಅಂತರದಿಂದ ಗೆಲ್ಲಬೇಕಿತ್ತು: ಜಾರಕಿಹೊಳಿ







