
ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲುಗಡೆ ಮಾಡಿದ್ದ ಕಾರನ್ನು ತೆರೆವುಗೊಳಿಸಿ ಅವರ ಪ್ರಾಣ ರಕ್ಷಿಸಲು ಮುಂದಾದ ಕರ್ತವ್ಯ ನಿರತ ಮುಖ್ಯಪೇದೆಗೆ ವಾಹನ ಒಂದು ಡಿಕ್ಕಿ ಹೊಡೆದ ಪರಿಣಾಮ ಮುಖ್ಯಪೇದೆ ಸ್ಥಳದಲ್ಲಿ ಮೃತಪಟ್ಟ ಧಾರುಣ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಕುಣಿಗಲ್ ಪೊಲೀಸ್ ಠಾಣೆಯ 112 ಗಸ್ತು ವಾಹನದ ಮುಖ್ಯಪೇದೆ ನಿಂಗರಾಜು (44 )ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗಸ್ತು ಕರ್ತವ್ಯದಲ್ಲಿ ನಿರತರಾಗಿದ್ದಾಗ ಹನುಮಾಪುರ ಗೇಟ್ ಬಳಿಯ ಮುಖ್ಯ ರಸ್ತೆಯಲ್ಲಿ ಕಾರು ಒಂದು ನಿಂತಿತ್ತು, ಅಪಘಾತ ವಲಯವಾದ ಕಾರಣ ಅಪಘಾತವಾಗುವ ಸಾಧ್ಯತೆ ಇರುವ ಕಾರಣ ಕಾರು ಮುಂದಕ್ಕೆ ಹೋಗಲು ಸೂಚಿಸಲು ವಾಹನದಿಂದ ಇಳಿದು, ಕಾರಿನಲ್ಲಿದ್ದವರಿಗೆ ಬುದ್ಧಿ ಹೇಳಿ ಕಾರುಗೊಳಿಸಿ ಪುನಃ ಗಸ್ತುವಾಹನ ವಾಹನಕ್ಕೆ ಹಿಂದಿರುಗುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ, ವಿಷಯ ತಿಳಿದ ಡಿಎಸ್ಪಿ ಓಂ ಪ್ರಕಾಶ್, ಸಿಪಿಐ ನವೀನ್ ಗೌಡ, ಮಾದ್ಯನಾಯಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ, ಮೃತ ಮುಖ್ಯಪೇದೆ ತುರುವೇಕೆರೆ ತಾಲೂಕಿನ ತಾಳೆಕೆರೆ ಮೂಲದವರು ಎಂದು ಗುರುತಿಸಲಾಗಿದ್ದು, ತಾಯಿ, ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಶುಕ್ರವಾರ ನೆರವೇರಿತು, ಗುರುವಾರ ರಾತ್ರಿಯೆ ಎಸ್ಪಿ ಅಶೋಕ್, ಎಎಸ್ಪಿ ಪುರುಷೋತ್ತಮ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತರು ಜನಸ್ನೇಹಿ ಯಾಗಿದ್ದರಿಂದ ತಡರಾತ್ರಿವರೆಗೂ ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಅವರ ಕಾರ್ಯವೈಖರಿ ಸ್ಮರಿಸಿದರು.
ಅಪಘಾತದಲ್ಲಿ ಮುಖ್ಯ ಪೇದೆ ಸಾವು







