ಹುಣಸೂರು: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರು ತಾವೇ ಮಂಕರಿಯಲ್ಲಿ ಮಣ್ಣು ಹೊತ್ತು ಟ್ರ್ಯಾಕ್ಟರ್ ಗೆ ತುಂಬಿಸಿ ಕೂಲಿ ಕಾರ್ಮಿಕರನ್ನು ಹುರಿದುಂಬಿಸಿದರು.
ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಕರಿಮುದ್ದನಹಳ್ಳಿ ಕೆರೆಯಲ್ಲಿ ಗ್ರಾಮೀಣ ಖಾತ್ರಿ ಯೋಜನೆ ವಿಬಿಜಿ ರಾಮ್ ಜಿ ಅಡಿ ಹೂಳೆತ್ತುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವರು ಕಾಮಗಾರಿಯನ್ನು ಪರಿಶೀಲಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುಕ್ಕೇಶ್ ಅವರೊಂದಿಗೆ ಕೆರೆ ಹೂಳು ತೆಗೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ಮಾತನಾಡಿ, ವಿಬಿಜಿ ರಾಮ್ ಜಿ ಅಡಿ 125 ದಿನ ಅರ್ಹ ಫಲಾನುಭವಿಗಳ ಕುಟುಂಬಕ್ಕೆ ಕೆಲಸ ನೀಡುತ್ತಿದೆ. ಪ್ರತಿ ನಿತ್ಯ 382 ರೂ. ಕೂಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಸುವಂತೆಯೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಶಾಸಕ ಹರೀಶ್ ಗೌಡ ಮತ್ತು ಮಾಜಿ ಶಾಸಕ ಮಂಜುನಾಥ್ ಇದ್ದರು.
ಮಣ್ಣುಹೊತ್ತ ಸಚಿವ ಖಂಡ್ರೆ!










